ಕರ್ನಾಟಕ ವೃತ್ತ : ಮುದವೀಡು ಕೃಷ್ಣರಾಯರ ಸಂಪಾದಕತ್ವದಲ್ಲಿ ಧಾರವಾಡದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. == ನಡೆದು ಬಂದ ದಾರಿ == ೧೮೯೨ರಲ್ಲಿ ಪ್ರಾರಂಭವಾದ ಈ ಪತ್ರಿಕೆಯಲ್ಲಿ ಅನಂತರ ಧನಂಜಯವೂ ಸಮಾವೇಶವಾಗಿ ಕರ್ನಾಟಕ ವೃತ್ತ ಮತ್ತು ಧನಂಜಯ ಎಂಬ ಹೆಸರಿನಿಂದ ಇದು ೧೯೩೬ರ ವರೆಗೂ ನಡೆಯಿತು. ೧೯೨೪ರಲ್ಲಿ ಕೆಲಕಾಲ ದಿನಪತ್ರಿಕೆಯಾಗಿತ್ತು. ರಾಷ್ಟ್ರೀಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಕ್ಕೆ ಪತ್ರಿಕೆ ಮಹತ್ತ್ವ ಕೊಟ್ಟರೂ ಬರೆವಣಿಗೆಯನ್ನು ಸಾಧ್ಯವಿದ್ದಷ್ಟು ಮಟ್ಟಿಗೆ ಕಾನೂನಿನ ಮಿತಿಯೊಳಗೆ ಇರಿಸಿಕೊಂಡಿತ್ತು. ಸಂಪಾದಕರಾದ ಮುದವೀಡು ಅವರು ತಮ್ಮ ಉಗ್ರ ವಿಚಾರಗಳಿಗಾಗಿ ಹಾಗೂ ಭಾಷಣಗಳಿಗಾಗಿ ಕಾರಾಗೃಹ ಸೇರಿದ್ದರೂ ಪತ್ರಿಕೆಯ ಮೆಲೆ ಸರ್ಕಾರ ತೀವ್ರಕ್ರಮ ಕೈಗೊಂಡಿರಲಿಲ್ಲ. ಜಲಿಯನ್ವಾಲಾಬಾಗ್ ದುರಂತ ಪ್ರಕರಣದಲ್ಲಿ ಗೋಲಿಬಾರು ಆಜ್ಞೆಗೆ ಕಾರಣನಾದ ಜನರಲ್ ಡಯರನನ್ನೂ ಧಾರವಾಡದ ಕಲೆಕ್ಟರನಾದ ಪೇಂಟರನ್ನೂ ಹೋಲಿಸಿ ೧೯೨೦ರಲ್ಲಿ ಬರೆದ ವ್ಯಂಗ್ಯ ಲೇಖನಕ್ಕಾಗಿ ಸರ್ಕಾರ ಅದರ ಮೇಲೆ ಮೊಕದ್ದಮೆ ಹೂಡಿದರೂ ಅದು ವಿಫಲವಾಯಿತು. ಕರ್ನಾಟಕ ವೃತ್ತದಲ್ಲಿ ರಾಜಕೀಯ ಸುದ್ದಿಗಳಲ್ಲದೆ ಸ್ವದೇಶೀಪ್ರಚಾರ, ಕನ್ನಡ ಭಾಷೆಯ ಪುನರುಜ್ಜೀವನ, ಕರ್ನಾಟಕದ ಏಕೀಕರಣ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಸುದ್ದಿಗಳೂ ಅಭಿಪ್ರಾಯಗಳೂ ಪ್ರಕಟವಾಗುತ್ತಿದ್ದವು. ಪ್ರತಿ ಸಂಚಿಕೆಯೂ ಡಿಮೈ ಪುರ್ಣಾಕಾರದ ೪ ರಿಂದ ೮ರ ವರೆಗೆ ಪುಟಗಳನ್ನೊಳಗೊಂಡಿರುತ್ತಿತ್ತು.